- ಕೃಷಿ ಸುದ್ದಿಕೃಷಿ ವಿಜ್ಞಾನ
- January 22, 2022
- No Comment
- 714
ರಸಗೊಬ್ಬರ ಬಳಸಿದರೆ ಮಾತ್ರ ಅಧಿಕ ಇಳುವರಿಯ ತಪ್ಪು ಕಲ್ಪನೆ, ಸಾವಯವ ಕೃಷಿಗೆ ಆದ್ಯತೆ ನೀಡಿ : ಪ್ರಧಾನಿ ಕರೆ

ಕೃಷಿ ಲೋಕ : ಕೃಷಿಯನ್ನು ಮೊದಲು ಪ್ರಯೋಗಾಲಯಗಳಿಂದ ಹೊರಗೆ ತರಬೇಕು. ಪ್ರಕೃತಿಯ ಜೊತೆಗೆ ಮರುಜೋಡಿಸುವ ಕೆಲಸ ಆಗಬೇಕಿದೆ. ಮೊದಲು ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೃಷಿಕರಿಗೆ ಕಿವಿಮಾತು ನೀಡಿದ್ದಾರೆ.
ಸಹಜ ಕೃಷಿ ಕುರಿತು ಪ್ರಧಾನಿಯಿಂದ ಕೃಷಿಕರಿಗೆ ಸಂದೇಶ
ರಾಷ್ಟ್ರಮಟ್ಟದ ಸಮಾವೇಶದ ವರ್ಚುಯಲ್ ವೇದಿಕೆಯಲ್ಲಿ ಪ್ರಧಾನಿ ಮೋದಿ ಕೃಷಿಕರಿಗೆ ಕೆಲ ಸಂದೇಶಗಳನ್ನೂ ನೀಡಿದರು. ಹೊಲದಲ್ಲಿಯೇ ಒಣಹುಲ್ಲು ಸುಡುವ ಪದ್ಧತಿ ಕುರಿತಂತೆ ಕಳವಳ ವ್ಯಕ್ತಪಡಿಸಿದರು. ಇಂಥ ಕ್ರಮಗಳು ಕೃಷಿಭೂಮಿ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಎಂದು ತಿಳಿಹೇಳಿದ್ದಾರೆ..
ರಸಗೊಬ್ಬರ ಬಳಸಿದರೆ ಮಾತ್ರ ಅಧಿಕ ಇಳುವರಿಯ ತಪ್ಪು ಕಲ್ಪನೆ..!!
ರೈತರಲ್ಲಿರುವ ತಪ್ಪು ಕಲ್ಪನೆಯಿಂದ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತಿಲ್ಲ ಅನ್ನುವುದರ ಬಗ್ಗೆಯೂ ಪ್ರಧಾನಿ ಮಾತನಾಡಿದರು. ರಾಸಾಯನಿಕ, ರಸ ಗೊಬ್ಬರಗಳ ಆಮದು ವೆಚ್ಚ ಹೆಚ್ಚುತ್ತಿದೆ. ಕೃಷಿ ಉತ್ಪನ್ನಗಳು ದುಬಾರಿ ಆಗುತ್ತಿವೆ. ರಸಗೊಬ್ಬರ ಬಳಸದಿದ್ದರೆ ಅಧಿಕ ಇಳು ವರಿ ಬರುವುದಿಲ್ಲ ಎಂಬ ತಪ್ಪುಗ್ರಹಿಕೆಯೂ ರೈತರಲ್ಲಿದೆ ಎಂದು ಹೇಳಿದರು.
ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ. ಹಸಿರುಕ್ರಾಂತಿಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಪಾತ್ರ ಮುಖ್ಯವಾಗಿತ್ತು ಎಂಬುದು ನಿಜ. ಈಗ ಅವುಗಳಿಗೆ ಪರ್ಯಾಯವನ್ನು ಹುಡುಕುವ ಕಾಲ ಹತ್ತಿರವಾಗಿದೆ. ಮುಂಜಾಗ್ರತೆಯು ಉಪಶಮನ ಕ್ರಮಕ್ಕಿಂತಲೂ ಮುಖ್ಯವಾದುದು ಎಂದು ಕಿವಿಮಾತು ಹೇಳಿದರು.
ಜಾನುವಾರು ಸಾಕಾಣೆಗೆ ಆದ್ಯತೆ:
ಸಹಜ ಕೃಷಿಯೂ ವೈಜ್ಞಾನಿಕ ಪದ್ಧತಿಯಾಗಿದೆ. ಪರಿಣಿತರ ಪ್ರಕಾರ, ಜಾನುವಾರುಗಳು ಸಾವಯವ ಕೃಷಿಯಲ್ಲಿ ಮುಖ್ಯ ಪಾತ್ರ ವಹಿಸಲಿವೆ. ಅವುಗಳ ಸಗಣಿ, ಗಂಜಲವನ್ನು ರಸಗೊಬ್ಬರ ಮತ್ತು ಕೀಟನಾಶಕವಾಗಿ ಬಳಸಬಹುದು. ಇದರಿಂದ ಕೃಷಿ ವೆಚ್ಚ ತಗ್ಗಲಿದೆ. ಸಹಜ ಕೃಷಿಯು ಸಣ್ಣ, ಅತಿಸಣ್ಣ ರೈತರಿಗೆ ಹೆಚ್ಚು ಲಾಭಕರವಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇತರೆ ಕೆಲವು ಸಂಸ್ಥೆಗಳು ಈಗ ಪ್ರಯೋಗಾಲಯದಿಂದ ಮಣ್ಣಿಗೆ ಚಿಂತನೆಯನ್ನು ಅಳವಡಿಸಿಕೊಂಡು, ತಳಮಟ್ಟದಲ್ಲಿ ಕೃಷಿಕರಿಗೆ ನೆರವಾಗಬೇಕು. ಎಲ್ಲ ರಾಜ್ಯ ಸರ್ಕಾರಗಳೂ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಒಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆಗಿನ ಕಳಕಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇನ್ನಾದರೂ ರೈತರ ಸಾವು ನೋವುಗಳು ಕಡಿಮೆ ಆಗಬಹುದೇನೋ ಕಾಡುನೋಡಬೇಕಿದೆ..