- ಕೃಷಿ ಉದ್ಯಮ
- March 16, 2022
- No Comment
- 2401
ಜೇನು ಕೃಷಿ ಅತೀ ಲಾಭದಾಯಕ – ಇದನ್ನು ಉದ್ಯಮವಾಗಿಯೂ ಮಾಡಬಹುದು…!! ಜೇನು ಕೃಷಿ ಕುರಿತಾದ ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ…

ಕೃಷಿ ಲೋಕ : ಕೊರೊನಾ ಲಾಕ್ ಡೌನ್ ನಂತರ ಉದ್ಯೋಗ ಕಳೆದುಕೊಂಡು ಕಂಗಾಲಾದ ಅನೇಕ ಯುವಕ/ಯುವತಿಯರು ಇದೀಗ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಜೇನು ಕೃಷಿ ಇದೀಗ ಯುವ ಜನರ ನೆಚ್ಚಿನ ಆಯ್ಕೆಯಾಗಿದೆ. ಗ್ರಾಮೀಣ ಭಾಗದ ಕೃಷಿ ಹಿನ್ನೆಲೆಯವರಿಗೆ ಜೇನು ಸಾಕಣೆ (Beekeeping Business) ಉತ್ತಮ ಆಯ್ಕೆಯಾಗಿದ್ದು, ನಮ್ಮಲ್ಲಿನ ಪರಿಶುದ್ಧ ಜೇನಿಗೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆಯಿರುವ ಕಾರಣಕ್ಕೆ ಅಧಿಕ ಲಾಭವೂ ತರಬಹುದಾದ, ಅತೀ ಕಷ್ಟಕರವಲ್ಲದ ಕೆಲಸವಿಲ್ಲದ ಕಾರಣಕ್ಕಾಗಿ ಜೇನು ಕೃಷಿ ಇದೀಗ ಟ್ರೆಂಡ್ ಆಗಿದೆ.

ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಆತ್ಮನಿರ್ಭರ ಯೋಜನೆಯಡಿ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದರಲ್ಲಿ ಜೇನು ಕೃಷಿಗೆ ಅತ್ಯುತ್ತಮ ಉತ್ತೇಜನ ಸಿಗುತ್ತಿದೆ.
ಯುವಕ ಯುವತಿಯರು ನಿರುದ್ಯೋಗದಿಂದ ಬಳಲುವ ಬದಲು, ಕೇವಲ ನೌಕರಿ ಹುಡುಕುತ್ತ ಕಾಲ ಕಳೆಯುವ ಬದಲು ಜೇನು ಸಾಕಾಣಿಕೆ ಮಾಡಬಹುದು. ಅದೂ ಸ್ವಂತ ಊರಿನಲ್ಲಿ..! ಹಚ್ಚ ಹಸಿರಿನ ನಡುವೆ ತುಂಬಾ ಒಳ್ಳೆಯ ಸ್ವಂತ ಉದ್ಯೋಗ ನಡೆಸಬಹುದು.
ಪರಿಶುದ್ಧ ಜೇನಿಗೆ ಇದೆ ಭಾರೀ ಬೇಡಿಕೆ…!!

ಔಷಧಿಗಳಿಂದ ಆಹಾರ ಉತ್ಪನ್ನಗಳವರೆಗೆ ಜೇನುತುಪ್ಪವನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆ ಇದೆ. ಜೊತೆಗೆ ಜೇನುಸಾಕಣೆಯು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪನ್ನವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.
ಪರಾಗಸ್ಪರ್ಶಕ್ಕೂ ಅನುಕೂಲ..!!
ಜೇನು ನೊಣಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತವೆ. ಇದರಿಂದ ಬೆಳೆ ಇಳುವರಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಅನೇಕ ರಾಜ್ಯಗಳಲ್ಲಿ ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ಜೇನುಸಾಕಣೆಯನ್ನು ಆರಂಭಿಸುತ್ತಿದ್ದಾರೆ. ಇದರ ಮೂಲಕ ಉತ್ತಮ ಹಣ ಗಳಿಸುತ್ತಿದ್ದಾರೆ. ಸರ್ಕಾರವೂ ಅವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.
ಜೇನು ಕೃಷಿಗೆ ತರಬೇತಿಯೂ ಸಿಗುತ್ತದೆ…!!
ತೋಟ-ಗದ್ದೆಗಳ ನಡುವೆ ಜೇನು ಸಾಕಾಣಿಕೆಯನ್ನು ಜೇನು ಸಾಕಣೆ ಎನ್ನುತ್ತಾರೆ. ಬೆಳೆ ಉತ್ಪಾದನೆಯ ವರ್ಧನೆಗಾಗಿ ಜೇನುಸಾಕಣೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಈ ಯೋಜನೆಯನ್ನು ತಂದಿದೆ. ಜೇನುಸಾಕಣೆ ವಲಯವನ್ನು ಅಭಿವೃದ್ಧಿಪಡಿಸುವುದು, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವುದು, ತರಬೇತಿ ಮತ್ತು ಅರಿವು ನೀಡುವುದು ಯೋಜನೆಯ ಉದ್ದೇಶವಾಗಿದೆ.
ರಾಷ್ಟ್ರೀಯ ಜೇನು ಮಂಡಳಿ (NBB) ನಬಾರ್ಡ್ ಸಹಯೋಗದೊಂದಿಗೆ ಭಾರತದಲ್ಲಿ ಜೇನುಸಾಕಣೆಗೆ ಹಣಕಾಸು ಒದಗಿಸುತ್ತಿದೆ. ಜೇನುಸಾಕಣೆ ವ್ಯವಹಾರಕ್ಕೆ ಸರಕಾರ ಶೇ.80ರಿಂದ 85ರಷ್ಟು ಸಹಾಯಧನ ನೀಡುತ್ತದೆ.
1 ಪೆಟ್ಟಿಗೆಯಿಂದಲೂ ಆರಂಭಿಸಬಹುದು..!!
ಜೇನುಸಾಕಣೆಯನ್ನು ಮೊದಲು 1 ಪೆಟ್ಟಿಗೆಯಿಂದಲೂ ಆರಂಭಿಸಬಹುದು. 10 ಪೆಟ್ಟಿಗೆಗಳೊಂದಿಗೂ ಪ್ರಾರಂಭಿಸಬಹುದು. 10 ಜೇನು ಪೆಟ್ಟಿಗೆಗಳ ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಪೆಟ್ಟಿಗೆಯಲ್ಲಿ 10-20 ಕೆ.ಜಿ ಜೇನುತುಪ್ಪ ಸಿಕ್ಕರೆ ಜೇನು ಪೆಟ್ಟಿಗೆ ಒಟ್ಟು ಜೇನು 200 ಕೆಜಿ ಜೇನು ಸಿಕ್ಕಂತಾಗುತ್ತದೆ. ಕೆಜಿಗೆ ಕನಿಷ್ಠ 350 ರೂ.ನಂತೆ ಮಾರಾಟ ಮಾಡಿದರೂ 200 ಕೆಜಿ ಮಾರಾಟ ಮಾಡುವುದರಿಂದ 70 ಸಾವಿರ ಆದಾಯ ಬರುತ್ತದೆ.
ಒಂದು ಜೇನು ಪೆಟ್ಟಿಗೆಯ ಬೆಲೆ ಸುಮಾರು 3500 ರೂ. ಎಂದುಕೊಳ್ಳೋಣ. ಒಟ್ಟು 10 ಜೇನು ಪೆಟ್ಟಿಗೆಗೆ ತಗಲುವ ವೆಚ್ಚ 35,000 ರೂ. ನಿಮಗೆ ಖರ್ಚನ್ನು ಕಳೆದು ಉಳಿಯುವ ನಿವ್ವಳ ಲಾಭ 35,000 ರೂ. ಆದಂತಾಗುತ್ತದೆ. ಮುಂದೆ ನಿಮಗೆ ಈ ಆದಾಯವನ್ನು ಮತ್ತಷ್ಟು ಪೆಟ್ಟಿಗೆ ಖರೀದಿಸಲು ಬಳಸಬಹುದು.

ಬೋನಸ್ ಆದಾಯ..!!
ಇದಲ್ಲದೇ ಇನ್ನೊಂದು ಲಾಭವಿದೆ. ಅದುವೇ ಜೇನುನೊಣಗಳ ಸಂಖ್ಯೆಯಲ್ಲಿನ ಹೆಚ್ಚಳ. ನೊಣಗಳ ಸಂಖ್ಯೆ ಹೆಚ್ಚಿದಂತೆ ನೀವು ಇನ್ನಷ್ಟು ಜೇನು ಪೆಟ್ಟಿಗೆ ಇಟ್ಟು ನಿಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಆದಾಯವು ಹೆಚ್ಚುತ್ತದೆ.
ಜೇನುಸಾಕಣೆಯು ಕೇವಲ ಜೇನುತುಪ್ಪ ಮತ್ತು ಮೇಣಕ್ಕೆ ಸಂಬಂಧಿಸಿದ್ದಲ್ಲ. ಜೇನುಮೇಣ, ರಾಯಲ್ ಜೆಲ್ಲಿ, ಪರಾಗ ಅಥವಾ ಬೀ ಗಮ್ ಅನ್ನು ಪರಾಗವಾಗಿ ಉತ್ಪಾದಿಸಬಹುದು. ಈ ಎಲ್ಲಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.
ದೊಡ್ಡಮಟ್ಟದ ಲಾಭ ಗಳಿಸುವ ಅವಕಾಶ..!!
ನೀವು ಜೇನುಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸಿದರೆ 100 ಪೆಟ್ಟಿಗೆಗಳನ್ನು ಸಹ ಇಟ್ಟುಕೊಳ್ಳಬಹುದು. ಇದರಿಂದ 4000 ಕೆಜಿ ಜೇನುತುಪ್ಪವು ಉತ್ಪಾದನೆಯಾಗುವ ಸಾಧ್ಯತೆ ಇರುತ್ತದೆ. 400 ಕೆಜಿ ಜೇನು ಕೆಜಿಗೆ 350 ರೂ.ಗೆ ಮಾರಾಟವಾದರೆ 14,00,00,000 ರೂ. ಒಂದು ಪೆಟ್ಟಿಗೆಯ ಬೆಲೆ 3500 ರೂ ಆಗಿದ್ದರೆ ಒಟ್ಟು ವೆಚ್ಚ 3,40,000 ರೂ. ಕೂಲಿ, ಪ್ರಯಾಣದಂತಹ ಇತರೆ ವೆಚ್ಚಗಳಿಗೆ ರೂ. 1,75,000 ಖರ್ಚಾಗುತ್ತದೆ ಎಂದುಕೊಳ್ಳಿ.
ನಿಮಗೆ ಉಳಿಯುವ ನಿವ್ವಳ ಲಾಭ ರೂ.10,15,000! ತಿಂಗಳಿಗೊಮ್ಮೆ ಜೇನು ಮಾರಾಟ ಮಾಡಿ ತಿಂಗಳಿಗೆ ರೂ.70 ಸಾವಿರದಿಂದ 1 ಲಕ್ಷದವರೆಗೂ ಗಳಿಸಬಹುದು..!
ಆದರೆ ಇಷ್ಟೆಲ್ಲ ಲಾಭ ಗಳಿಸುವ ಮುನ್ನ ನೀವು ಜೇನಿನ ಬಗ್ಗೆ ತಿಳುವಳಿಕೆ ಹೊಂದಬೇಕು. ಜೇನುಕೃಷಿಯನ್ನು ಕಲಿಯಬೇಕು. ಸೂಕ್ತ ತಿಳುವಳಿಕೆ ಇಲ್ಲದೇ ಕೈಹಾಕಬೇಡಿ. ತರಬೇತಿ ಪಡೆದು ಯಶಸ್ವಿಯಾಗಿ ಜೇನು ಸಾಕಾಣಿಕೆ ಮಾಡಬಹುದು. ಮುಖ್ಯವಾಗಿ ಜೇನು ಸಾಕಾಣಿಕೆ ಮಾಡಬಯಸುವವರು ಮೊದಲು ಎರಡು ಅಂಶಗಳನ್ನು ಯೋಜಿಸಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಮಾಡುತ್ತಿರುವುದೇ ಅಥವಾ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮತ್ತು ಮನೆ , ಸ್ನೇಹಿತರ ಉಪಯೋಗಕ್ಕೆ ನೀಡಲು ಮಿತಪ್ರಮಾಣದ ಜೇನು ಉತ್ಪಾದನೆಗಾಗಿ ಮಾಡುತ್ತಿರುವುದೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.

ವಾಣಿಜ್ಯ ಉದ್ದೇಶಕ್ಕಾಗಿ ಮಾಡುತ್ತಿದ್ದರೆ ಹೂಡಬೇಕಾದ ಬಂಡವಾಳವೂ ಹೆಚ್ಚು ಇರಬೇಕಾಗುತ್ತದೆ. ಮನೆ ಬಳಕೆಗೆ ಮತ್ತು ಇಳುವರಿ ಹೆಚ್ಚಳ ಉದ್ದೇಶಕ್ಕೆ ಇಂಥ ಬಂಡವಾಳ ಅಗತ್ಯವಿರುವುದಿಲ್ಲ. ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಯ ಇಳುವರಿ ಮಾಮೂಲಿ ಪ್ರಮಾಣಕ್ಕಿಂತ ಶೇಕಡ 20 ಕ್ಕೂ ಹೆಚ್ಚಾಗುತ್ತದೆ. ಸೇಬು, ಸೀಬೆ ( ಪೇರು ), ಚೆರಿ, ಕಿತ್ತಳೆ, ನಿಂಬೆ, ತಾಳೆ, ನೇರಳೆ, ಗೋಡಂಬಿ, ನಿಂಬೆ, ದಾಳಿಂಬೆ ತೋಟಗಳಲ್ಲಿ ಜೇನು ಪೆಟ್ಟಿಗೆಗಳನ್ನಿಡುವುದು ಪರಿಣಾಮಕಾರಿ . ಕುಸುಬೆ, ಜೋಳ, ಎಳ್ಳು,, ಅಲ್ಲದೇ ತರಕಾರಿಗಳ ಕೃಷಿ ಮಾಡುವ ಸ್ಥಳಗಳಲ್ಲಿಯೂ ಜೇನು ಪೆಟ್ಟಿಗೆ ಇಡುವುದು ಉತ್ತಮ.
ಯುವಕರಿಗೆ ಕಿವಿಮಾತು :
ಜೇನು ಕೃಷಿ ಲಾಭದಾಯಕ ನಿಜ. ಆದರೆ ಮೊದಲಿಗೆ ಸಣ್ಣದಾಗಿ ಯೋಜನೆ ಆರಂಭಿಸಿ, ಒಮ್ಮೆ ಹಿಡಿತ ಸಿಕ್ಕ ಮೇಲೆ ಅದನ್ನೇ ಮುಂದುವರೆಸಿ…
ಶುಭವಾಗಲಿ..