- ಸರ್ಕಾರಿ ಯೋಜನೆಗಳು
- January 8, 2022
- No Comment
- 755
ಸರಕಾರದಿಂದ ರೈತರಿಗೆ ಯಾವೆಲ್ಲ ಸೌಲಭ್ಯಗಳು ಲಭ್ಯವಿದೆ ಗೊತ್ತಾ..? ಕೃಷಿಕರಿಗೆ ಇರುವ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ…

ಕೃಷಿ ಲೋಕ : ಭಾರತ ರೈತ ಪ್ರಧಾನ ದೇಶವಾಗಿದ್ದು, ರೈತರೇ ನಮ್ಮ ದೇಶದ ಬೆನ್ನೆಲುಬು ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ವಿದೇಶದಲ್ಲಿರುವ ರೈತರಿಗೆ ಹೋಲಿಸಿದರೆ ನಮ್ಮ ದೇಶದ ತಲಾ ಆದಾಯ ತೀರಾ ಕಡಿಮೆ. ಅದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಕೃಷಿ ಸುಧಾರಣೆಗಳನ್ನು ಹಾಗೂ ಯೋಜನೆಗಳನ್ನು ತಂದಿದೆ. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದ ಜನರಿಗೆ ಸರಕಾರದ ಯೋಜನೆಗಳು ಸರಿಯಾಗಿ ಮುಟ್ಟುತ್ತಿಲ್ಲ. ಅದಕ್ಕಾಗಿಯೇ ಸರಕಾರದ ಎಲ್ಲ ಯೋಜನೆಗಳ ಮಾಹಿತಿಗಳು ಸೂಕ್ತ ಸಮಯದಲ್ಲಿ ರೈತರಿಗೆ ತಲುಪಬೇಕು ಎಂಬ ಉದ್ದೇಶದಿಂದ ಕೃಷಿ ಲೋಕ ತಂಡ ಕೆಲಸ ಮಾಡುತ್ತಿದೆ. ಅಂತಹ ಆಯ್ದ ಕೆಲವು ಯೋಜನೆಗಳ ಪಟ್ಟಿ ಇಲ್ಲಿದೆ.
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ.
ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ ಕೇಂದ್ರ ಸರ್ಕಾರವು 10 ಕಂತುಗಳಲ್ಲಿ ರೈತರಿಗೆ ಪ್ರತಿ ಕಂತಿನ 2 ಸಾವಿರದಂತೆ ಜಮೆ ಮಾಡುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ವಾರ್ಷಿಕ 6 ಸಾವಿರ ರೂಪಾಯಿಗೆ 4 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡುವುದಾಗಿ ಘೋಷಿಸಿದೆ.
- ಕೃಷಿ ಯಾಂತ್ರೀಕರಣ ಯೋಜನೆ
ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಈ ಯೋಜನೆಯಡಿ ರೈತರಿಗೆ ಶೇ. 50 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ನೀಡಲಾಗುವುದು. ಉಳುಮೆಯಿಂದ ಕೊಯ್ಲುವರೆಗೆ ಉಪಯುಕ್ತವಿರುವ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ರೈತರಿಗೆ ನೀಡಲಾಗುವುದು.
- ಕೃಷಿ ಯಂತ್ರಧಾರೆ
ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಲ್ಲಿ ಕಡಿಮೆ ಬಾಡಿಗೆ ದರದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.
- ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ
ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ನೀಡಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಮಾಡಿಸಿದರೆ ಮಳೆ, ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ಪರಿಹಾರ ನೀಡಲಾಗುವುದು.. ಬೆಳೆ ಸಾಲ ಮಾಡಿದ ರೈತರಿಗೆ ಬೆಳೆ ವಿಮೆ ಕಡ್ಡಾಯಗೊಳಿಸಲಾಗಿದೆ. ಸಾಲ ಪಡೆಯದ ರೈತರು ಅಧಿಸೂಚಿತ ಘಟಕದಡಿ ಬೆಳೆಗಳಿಗೆ ನಿಗದಿತ ಅವಧಿಯೊಳಗೆ ಪ್ರಿಮಿಯಂ ಮೊತ್ತ ಪಾವತಿಸಿ ಬೆಳೆ ವಿಮೆ ಮಾಡಿಸಬಹುದು.
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
ರೈತರ ಜಮೀನಿನಲ್ಲಿ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.
- ಕೃಷಿ ಭಾಗ್ಯ ಯೋಜನೆ
ಮಳೆ ನೀರಿನ ಸಮರ್ಥ ಬಳಕೆ ಮತ್ತು ಸಂರಕ್ಷಿತ ನೀರಾವರಿಗೆ ತನ್ಮೂಲಕ ಸುಧಾರಿತ ಬೆಳೆ ಉತ್ಪಾದನಾ ಪದ್ದತಿ ಅಳವಡಿಸಲು ರೈತರನ್ನು ಪ್ರೋತ್ಸಾಹಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಪ್ಯಾಕೇಜ್ ರೂಪದಲ್ಲಿ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಘಟಕಗಳಿಗೆ ಸಹಾಯಧನ ನೀಡಲಾಗುವುದು.
- ಬೀಜಗಳ ಪೂರೈಕೆ ಯೋಜನೆ
ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕ್ರಮವಾಗಿ ಶೇ. 50 ಹಾಗೂ ಶೇ. 75ರ ಸಹಾಯಧನ ಒದಗಿಸಲಾಗುವುದು.
- ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ
ಮಣ್ಣಿನಲ್ಲಿರುವ ಲಘುಪೋಷಕಾಂಶಗಳ ಕೊರತೆಯನ್ನು ನೀಗಿಸಲು ಹಸಿರೆಲೆ ಗೊಬ್ಬರ ಬೀಜಗಳು, ಲಘು ಪೋಷಕಾಂಶಗಳು, ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರ ಪರಿಕರಗಳನ್ನು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕ್ರಮವಾಗಿ ಶೇ. 50 ಹಾಗೂ ಶೇ. ಶೇ. 75 ಸಹಾಯಧನದಲ್ಲಿ ಒದಗಿಸಲಾಗುವುದು. ಎರೆಹುಳು ಗೊಬ್ಬರ ಘಟಕ ಮತ್ತು ಬಯೋಡೈಗ್ನೋಸ್ಟಿಕ್ ಘಟಕಗಳಿಗೆ ಸಹಾಯಧನ ನೀಡಲಾಗುವುದು.
- ಪ್ರಧಾನಮಂತ್ರಿ ಕಿಸಾನ್ ಮಾನ್ ಧನ ಯೋಜನೆ
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿಯಲ್ಲಿ 18-40 ವರ್ಷದೊಳಗಿನ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ವ್ಯಾಪ್ತಿಯ ನಾಗರಿಕ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ನೋಂದಾಯಿಸಬಹುದು. ಆಸಕ್ತ ರೈತರರು ಮಾಸಿಕ ಪಿಂಚಣಿ ವಂತಿಕೆ ಪಾವತಿಸಿ 60 ವರ್ಷ ತುಂಬಿದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು.
- ಕಿಸಾನ್ ಕ್ರೆಡಿಟ್ ಕಾರ್ಡ್
ಕೃಷಿ ಉದ್ದೇಶಗಳಿಗಾಗಿ ರೈತರಿಗೆ ಮೂರು ಲಕ್ಷದವರೆಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ. ಅತೀ ಕಡಿಮೆ ಬಡ್ಡಿದರದೊಂದಿಗೆ ಈ ಸಾಲ ಕೃಷಿಕರಿಗೆ ನೀಡಲಾಗುತ್ತಿದೆ.
ಕೃಷಿಗೆ ಸಂಬಂಧಿಸಿದ ಲೇಖನಗಳಿಗೆ ಸದಾ ಸ್ವಾಗತ.
ಕೃಷಿಲೋಕಕ್ಕೆ ನೀವೂ ಕೂಡ ಲೇಖನಗಳನ್ನು ಬರೆಯಬಹುದು. ಕೃಷಿಯಾಧಾರಿತ ಯಾವುದೇ ಲೇಖನಗಳು, ಸುದ್ದಿಗಳಿದ್ದರೂ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಉತ್ತಮ ಬರಹಕ್ಕೆ ನಾವು ವೇದಿಕೆ ಒದಗಿಸಲಿದ್ದೇವೆ.
ಸಂಪರ್ಕಕ್ಕಾಗಿ :
+91 8431215975, +91 7760479111