- ಕೃಷಿ ವಿಜ್ಞಾನ
- January 22, 2022
- No Comment
- 858
ಬೇಸಿಗೆ ಕಾಲದಲ್ಲಿ ಹರಿಯುವ ನೀರಿಗೆ ಚಿಕ್ಕ ಅಣೆಕಟ್ಟು ಕಟ್ಟುವುದು ಯಾಕೆ..? ಇದರ ಉಪಯೋಗಗಳೇನು..? ಜೀವಜಲದ ಉಪಯೋಗ ಮತ್ತು ಸಂರಕ್ಷಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

ಕೃಷಿಲೋಕ : ಯಾವಾನ್ ಅರ್ಥಃ ಉದಪಾನೇ ಸರ್ವತಃ ಸಂಪ್ಲುತ ತೋದಕೆ || ಬಾವಿಯಿಂದ ಏನೇನು ಉಪಯೋಗವಿದೆಯೋ ಅದೆಲ್ಲವೂ ತುಂಬಿ ಹರಿಯುವ ನೀರ ನೆಲೆಯಲ್ಲಿ ಒಳಗೊಂಡಿದೆ ಅನ್ನುವ ಸಂಸ್ಕೃತ ಶ್ಲೋಕದಲ್ಲಿ ನೀರಿನ ಮಹತ್ವವನ್ನು ತಿಳಿಯಬಹುದು.
ಈ ಭೂಮಿಯ ಜೀವರಾಶಿಗಳಿಗೆಲ್ಲ ಬಲು ಮಹತ್ವದ್ದಾಗಿರುವ ನೀರಿನ ಬಳಕೆಯ ಮತ್ತು ನೀರನ್ನು ರಕ್ಷಿಸುವ ಕುರಿತಾದ ಒಂದು ವರದಿ ಇಲ್ಲಿದೆ.ಪಂಚಭೂತಗಳಲ್ಲಿ ಒಂದಾದ ನೀರು ಪ್ರತಿನಿತ್ಯವೂ ನಮಗೆ ಉಪಯುಕ್ತವಾದ ಅಂಶ.
ಕೈಗಾರಿಕೀಕರಣ ಜಾಗತೀಕರಣ ಹಾಗೆ ಹೊಸದಾಗಿ ತಲೆಯೆತ್ತುತ್ತಿರುವ ಕಾಂಕ್ರೀಟಿಕೀಕರಣದಿಂದಾಗಿ ಅನೇಕ ಗಿಡ ಮರಗಳ ಮಾರಣಹೋಮ ಆಗುತ್ತಿದೆ. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಾ ಹೋಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ದಿನನಿತ್ಯದ ಉಪಯುಕ್ತವಾಗಿರುವ ನೀರನ್ನು ಕೂಡ ಹಣತೆತ್ತು ಕೊಂಡುಕೊಳ್ಳುವ ಕಾಲ ಬರುವುದರಲ್ಲಿ ಸಂಶಯವಿಲ್ಲ. ಮುಂದಿನ ಪೀಳಿಗೆಗಾಗಿ ನೀರನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಈಗಾಗಲೇ ಜನ ನೀರಿನ ಮಹತ್ವವನ್ನು ಸ್ವಲ್ಪಮಟ್ಟಿಗಾದರೂ ಅರಿತುಕೊಂಡು ನೀರನ್ನು ಉಳಿಸುವ ಸಲುವಾಗಿ ಹಲವಾರು ಜಲಸಂರಕ್ಷಣೆ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ನಮ್ಮ ಹಿರಿಯರು ಮೊದಲಿನಿಂದಲೇ ಈ ತೋಡು ( ಕಾಲುವೆ ) ಕೆರೆಗೆ ಅಡ್ಡಲಾಗಿ ಕೃತಕ ಅಣೆಕಟ್ಟನ್ನು ನಿರ್ಮಿಸುವ ಮೂಲಕ ನೀರನ್ನು ಉಳಿಸುವ ಕಾರ್ಯವನ್ನು ನಡೆಸುತ್ತಿದ್ದು, ಈ ಒಂದು ಪ್ರಯತ್ನವು ಕೂಡ ಶ್ಲಾಘನೀಯವಾದದ್ದು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಜಾಸ್ತಿ ಇರುವ ಕಾರಣ ಈ ಕೃಷಿ ಚಟುವಟಿಕೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಿದ್ದು ಅಗತ್ಯ ನೀರನ್ನು ಕೃಷಿಗೆ ಪೂರೈಸುವುದೇ ಈ ಕೆರೆ, ತೋಡು ( ಕಾಲುವೆ ) ಗಳಿಗೆ ಕೃತಕ ಅಣೆಕಟ್ಟನ್ನು ನಿರ್ಮಿಸುವ ಮೂಲ ಉದ್ದೇಶ.
ಡಿಸೆಂಬರ್, ಜನವರಿ ತಿಂಗಳಿನಲ್ಲಿ ಪ್ರಾರಂಭವಾಗುವ ಈ ಕೆಲಸ ಮಾರ್ಚ್ ಏಪ್ರಿಲ್ ವರೆಗೆ ಮುಂದುವರೆಯುತ್ತದೆ, ಹೀಗೆ ಶೇಖರಿಸಿದ ನೀರು ಮಾರ್ಚ್ ಏಪ್ರಿಲ್ ತನಕ ಇರುತ್ತದೆ.
ಏನಿದು ಕೃತಕ ಅಣೆಕಟ್ಟು?
ಕೆರೆ ಅಥವಾ ಕಾಲುವೆ ನೀರನ್ನು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಪೂರೈಸಲು ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುವ ತಂತ್ರವೇ ಆಗಿದೆ. ಇದು ಹಿಂದಿನ ಕಾಲದಲ್ಲಿ ಮರದ ಹಲಗೆ, ಮಣ್ಣು, ಬೈ ಹುಲ್ಲುಗಳಿಂದ ನಿರ್ಮಿಸುತ್ತಿದ್ದರು. ಈಗ ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿಸಲಾಗುತ್ತದೆ. ಮತ್ತೆ ಮಳೆಗಾಲ ಬಂದಾಗ ಇದನ್ನು ತೆರೆಯಲಾಗುತ್ತದೆ.

ಉಪಯೋಗ ಏನು?
ನೀರನ್ನು ಪಂಪ್ ಮೂಲಕ ಕೃಷಿ ತೋಟಗಳಿಗೆ ಗದ್ದೆಗಳಿಗೆ ಪೂರೈಸುವ ವ್ಯವಸ್ಥೆ ಇದ್ದು, ಸುಗ್ಗಿ ಸಮಯದಲ್ಲಿ ಬತ್ತದ ಸಾಗುವಳಿಗೆ ಗದ್ದೆಗೆ ನೀರು ಹಾಯಿಸಲು ಸಹಕಾರಿಯಾಗಿದ್ದು ಪಂಪ್ / ಯಂತ್ರದ ಅವಶ್ಯಕತೆ ಇರುವುದಿಲ್ಲ. ಮತ್ತೊಂದು ವಿಶೇಷತೆಯೆಂದರೆ ಕೃತಕ ಅಣೆಕಟ್ಟು ನಿರ್ಮಿಸಿದ ಸುತ್ತಮುತ್ತಲಿನ ಇನ್ನಾವುದೇ ಜಲಮೂಲಗಳಾದ ಕೆರೆ ಬಾವಿಗಳ ನೀರಿನ ಒಸರು ಬತ್ತುವುದಿಲ್ಲ. ಬದಲಾಗಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಉಂಟಾಗಿ ಮಣ್ಣಿನ ತೇವಾಂಶ ಹೆಚ್ಚಾಗುತ್ತದೆ. ಮತ್ತೆ ಏಪ್ರಿಲ್-ಮೇ ತಿಂಗಳಿನಲ್ಲಿ ನೀರಿನ ಮಟ್ಟ ತಾನಾಗಿಯೇ ಕುಗ್ಗುತ್ತಾ ಹೋಗುತ್ತದೆ.
ಈಗ ನಮ್ಮ ಹವಾಮಾನದ ವೈಪರಿತ್ಯದಿಂದಾಗಿ, ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕಾರಣದಿಂದಾಗಿ ಈ ಕೃತಕ ಅಣೆಕಟ್ಟು ನಿರ್ಮಿಸುವ ಪರಿಪಾಠವು ಬಹಳ ವಿರಳವಾಗಿ ಕಾಣಸಿಗುತ್ತಿದೆ.ಒಟ್ಟಾರೆಯಾಗಿ ಕೃಷಿ ಚಟುವಟಿಕೆಗಳಿಗೆ ನೀರಿನ ಪೂರೈಕೆ ಮಾಡಲು ಈ ಕೃತಕ ಅಣೆಕಟ್ಟಿನ ಪಾತ್ರ ಮಹತ್ತರವಾದದ್ದು.
ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೀರಿನ ಬಳಕೆ ಮಿತವಾಗಿರಲಿ, ಉಳಿತಾಯ ಅಧಿಕವಾಗಿರಲಿ. ಜೀವಜಲ ಎಂಬ ಹೆಸರಿನಿಂದಲೇ ಕರೆಯಲ್ಪಡುವ ನೀರಿನ ಮಹತ್ವವನ್ನು ನಾವೆಲ್ಲರೂ ಮನಗಾಣಬೇಕಾಗಿದ್ದು, ನೀರಿನ ರಕ್ಷಣೆ ನಮ್ಮಿಂದಲೇ ಆಗಬೇಕಿದೆ.